Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಭಾರತ ಕೃಷಿ ಪ್ರಧಾನ ದೇಶ.ಸುಮಾರು 80 ಶೇಕಡಾದಷ್ಟು ಜನ ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಅವಲಂಬಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕೃಷಿ ಹಾಗೂ ಹೈನುಗಾರಿಕೆಗೆ ಅತ್ಯಂತ ಹತ್ತಿರದ ಸಂಬಂಧ. ಬಹುತೇಕ ಕೃಷಿಕರು ಹೈನುಗಾರಿಕೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಅಲ್ಲದೇ ಭಾರತದಲ್ಲಿ ದಿನವೊಂದಕ್ಕೆಅಂದಾಜು 1.50 ಲಕ್ಷ ಮೆಟ್ರಿಕ್ ಟನ್ ಹಸಿ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು 2018ರ ಬಜೆಟ್ ಭಾಷಣದಲ್ಲಿ ಅಂದಿನ ಹಣಕಾಸು ಸಚಿವರು ಗೋಬರ್ ಧನ್ ಯೋಜನೆಯನ್ನು ಘೋಷಣೆ ಮಾಡಿದರು.

ಜಾನುವಾರು , ಕೃಷಿ , ಹಸಿ ತ್ಯಾಜ್ಯವನ್ನು ಬಯೋಗ್ಯಾಸ್, ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸಿ ಹಳ್ಳಿಗರ ಜೀವನ ಮಟ್ಟವನ್ನು ಸುಧಾರಿಸಲು ಈ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತು.ವಿಶೇಷವಾಗಿ ಹಳ್ಳಿಗಳಲ್ಲಿನ ಜಾನುವಾರು ತ್ಯಾಜ್ಯ, ಕೃಷಿ ತ್ಯಾಜ್ಯ, ಹಸಿ ತ್ಯಾಜ್ಯಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ ಗ್ರಾಮಗಳನ್ನು ಸ್ವಚ್ಛವಾಗಿರಿಸುವುದು ಈ ಯೋಜನೆಯ ಉದ್ದೇಶ. ಸದ್ಯ ದೇಶದಲ್ಲಿ ಸಾಕಷ್ಟು ಮಂದಿ ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ.

ಸಮುದಾಯ ಹಂತದಲ್ಲಿ ಗೋಬರ್ ಧನ್ ಘಟಕವನ್ನು ನಿರ್ಮಿಸಿ ಹಸಿ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡೋದಲ್ಲದೇ ಆರ್ಥಿಕವಾಗಿಯೂ ಲಾಭ ಗಳಿಸಬಹುದು. ಅತೀ ಹೆಚ್ಚು ಹಸಿ ತ್ಯಾಜ್ಯ ಉತ್ಪತ್ತಿಯಾಗುವ ಸ್ಥಳಗಳಾದ ಗೋಶಾಲೆ, ಅನ್ನದಾಸೋಹವಿರುವ ಧಾರ್ಮಿಕ ಸ್ಥಳಗಳು, ಸ್ವಚ್ಛ ಸಂಕೀರ್ಣ ಘಟಕ, ವಸತಿ ನಿಲಯಗಳು, ಸಮುದಾಯ ಭವನ, ತರಕಾರಿ/ಹೂ/ ಹಣ್ಣಿನ ಮಾರುಕಟ್ಟೆ, ಶಾಲೆಗಳಲ್ಲಿ ಗೋಬರ್ ಧನ್ ಘಟಕವನ್ನು ಸ್ಥಾಪಿಸಬಹುದು. ಗೋಬರ್ ಧನ್ ಘಟಕವನ್ನು ನಿರ್ಮಿಸಲು ಪ್ರತಿ ಜಿಲ್ಲೆಗೆ 50 ಲಕ್ಷ ರೂ. ಅನುದಾನ ದೊರೆಯುತ್ತದೆ. ಅದರಲ್ಲಿ ಕೇಂದ್ರ ಸರ್ಕಾರದಿಂದ 60 ರಷ್ಟು ಶೇಕಡಾ ಅನುದಾನ ನೀಡಿದರೆ, ಉಳಿದ 40 ರಷ್ಟು ಶೇಕಡಾ ಅನುದಾನವನ್ನು ರಾಜ್ಯ ಸರ್ಕಾರ ನೀಡುತ್ತಿದೆ.

ಕರ್ನಾಟಕದಲ್ಲಿ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬೇಡಕಣಿ, ಶಿರಸಿ ತಾಲೂಕಿನ ಸೋಂದಾಗ್ರಾ.ಪಂ.ಯ ವಾದಿರಾಜ ಮಠ, ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ ಗ್ರಾಮ ಪಂಚಾಯಿತಿಯ ಸ್ವಚ್ಛ ಸಂಕೀರ್ಣ ಘಟಕ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಹಳ್ಳಿ ಗ್ರಾ. ಪಂ. ಯ ಸ್ವಚ್ಛ ಸಂಕೀರ್ಣ ಘಟಕದಲ್ಲಿರುವ ಗೋಬರ್ ಧನ್ ಘಟಕ, ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ರಾಜಾನುಕುಂಟೆ ಗ್ರಾ.ಪಂ.ಯ ಸ್ವಚ್ಛ ಸಂಕೀರ್ಣ ಘಟಕದಲ್ಲಿ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಅಡಿಯಲ್ಲಿ ಗೋಬರ್ ಧನ್ ಘಟಕಗಳು ಕಾರ್ಯಾಚರಿಸುತ್ತಿವೆ. ಇದು ವಿದ್ಯುತ್ ಹಾಗೂ ಗ್ಯಾಸ್ ಗಾಗಿ ವ್ಯಯುಸುತ್ತಿದ್ದ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿದೆ. ಇನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ 4 ಗೋಬರ್ ಧನ್ ಘಟಕ ಕಾಮಗಾರಿ ಪ್ರಗತಿಯಲ್ಲಿದೆ. ಶೀಘ್ರದಲ್ಲೇ ಅವುಗಳು ಕಾರ್ಯಾಚರಣೆ ನಡೆಸಲಿವೆ.

ಕೇವಲ ಸಮುದಾಯ ಹಂತದಲ್ಲಿ ಮಾತ್ರವಲ್ಲದೇ ವೈಯುಕ್ತಿಕವಾಗಿ ಮನೆಗಳಲ್ಲೂ ಗೋಬರ್ ಧನ್ ಘಟಕವನ್ನು ನಿರ್ಮಿಸಬಹುದು. ಮನೆಗಳಲ್ಲಿ ಜಾನುವಾರಗಳು, ಸಾಕಷ್ಟು ಹಸಿ ತ್ಯಾಜ್ಯಗಳು ಉತ್ಪತ್ತಿಯಾಗುತ್ತಿದ್ದರೆ ಅದರಿಂದಲೇ ಬಯೋಗ್ಯಾಸ್ ಉತ್ಪಾದಿಸಬಹುದು. ಮನೆಯಲ್ಲಿ ಪ್ರತಿದಿನ ಅಡುಗೆ ಮನೆಯಲ್ಲಿ ಉತ್ಪತ್ತಿಯಾಗುವ ಹಣ್ಣು, ತರಕಾರಿಗಳ ತ್ಯಾಜ್ಯ, ಉಳಿದ ಆಹಾರಗಳು ಜೊತೆಗೆ ಕೃಷಿ ತ್ಯಾಜ್ಯಗಳನ್ನು ಗೋಬರ್ ಧನ್ ಘಟಕಕ್ಕೆ ಬಳಸಬಹುದು, ಇನ್ನು ಗೋಬರ್ ಧನ್ ಘಟಕದಿಂದ ಕೇವಲ ಗ್ಯಾಸ್ ಮಾತ್ರವಲ್ಲದೇ ಅದರಲ್ಲಿ ಉತ್ಪತ್ತಿಯಾಗುವ ಸ್ಲರಿ ಕೂಡ ಕೃಷಿಗೆ ಅತ್ಯಂತ ಉಪಯುಕ್ತ ಗೊಬ್ಬರ. ಇದೇ ಸ್ಲರಿಯಿಂದ ಎರೆಹುಳ ಗೊಬ್ಬರ ತಯಾರಿಸಿ ಮಾರಾಟ ಮಾಡಿ ಆರ್ಥಿಕ ಲಾಭ ಗಳಿಸಬಹುದು. ಹಸಿ ತ್ಯಾಜ್ಯಗಳ ಸಮರ್ಪಕ ನಿರ್ವಹಣೆ ಹಾಗೂ ಆರ್ಥಿಕ ಸದೃಢತೆಗೆ ಗೋಬರ್ ಧನ್ ಘಟಕ ಅತ್ಯುತ್ತಮ ಆಯ್ಕೆ ಅನ್ನೋದರಲ್ಲಿ ಅನುಮಾನವಿಲ್ಲ..

 4,501 total views,  4 views today

WhatsApp chat