Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

"ಗೌರಮ್ಮ ಗರ್ಭಿಣಿಯಾದಾಗಿನಿಂದ ಪದೇ ಪದೇ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಲೇ ಇದ್ದಾಳೆ. ವರ್ಷಗಳ ಹಿಂದೆ ಅವಳ ಒಂದು ಮಗು ಹುಟ್ಟಿದ ತಕ್ಷಣವೇ ತೀರಿಕೊಂಡಿತ್ತು. ನಾಲ್ಕನೆಯ ಬಾರಿಗೆ ಗೌರಮ್ಮ ಗರ್ಭಿಣಿಯಾಗಿದ್ದಾಳೆ. ಎರಡನೆಯ ಮಗನಿಗೆ ವಾಂತಿ – ಭೇಧಿಯ ಸಮಸ್ಯೆಗಳು ಕಾಡುತ್ತಲೇ ಇವೆ. ಮೊದಲ ಮಗಳು ಹುಷಾರು ತಪ್ಪುವ ತಮ್ಮನನ್ನು ನೋಡಿಕೊಳ‍್ಳುತ್ತಾ, ಅಮ್ಮನಿಗೆ ಸಹಾಯ ಮಾಡಲು ಶಾಲೆಗೆ ಹೋಗದೇ ಮನೆಯಲ್ಲಿಯೇ ಇದ್ದಾಳೆ. ಕೂಲಿ ಕೆಲಸ ಮಾಡುತ್ತಿರುವ ಗೌರಮ್ಮನ ಪತಿ ಬರುವ ಸಣ್ಣ ಆದಾಯವನ್ನು ಆಸ್ಪತ್ರೆಗೆ, ಔಷಧಿಗಳಿಗೆ ಸುರಿದು ಹೈರಾಣಾಗಿದ್ದಾನೆ.  ಹುಟ್ಟುವ ಮಗು ಆರೋಗ್ಯವಾಗಿದ್ದರೆ ಸಾಕು ಎಂದು ಗೌರಮ್ಮ ಆತಂಕಕ್ಕೆ ಒಳಗಾಗಿದ್ದಾಳೆ."

ಒಂದು ಕುಟುಂಬದ, ಒಂದು ಗ್ರಾಮದ, ಪ್ರದೇಶದ, ರಾಷ್ಟ್ರದ ಅಭಿವೃದ್ಧಿಯ ಒಂದು ಪುಟ್ಟ ಚಿತ್ರಣ ಇಲ್ಲಿ ಆರಂಭವಾಗುತ್ತದೆ. ಒಂದು ಮಗು ಹುಟ್ಟುವ ಕ್ಷಣದಿಂದ ಬೆಳೆಯುವ ಪ್ರತಿ ಹಂತದಲ್ಲೂ ಇಂತಹ ಸವಾಲುಗಳು ಆರಂಭವಾಗುತ್ತದೆ. ಈ ಬೆಳವಣಿಗೆಯ ಮುಖ್ಯ ಆಧಾರ ಸ್ಥಂಭಗಳೆಂದರೆ  ಸುಸ್ಥಿರ ನೀರು ಮತ್ತು ನೈರ್ಮಲ್ಯ. ಗ್ರಾಮೀಣ ಕರ್ನಾಟಕದಲ್ಲಿ ಅತ್ಯಂತ ದೊಡ್ಡ ಕೊರತೆಯಿದ್ದುದೆಂದರೆ ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯದ ಕೊರತೆ.

ಅಧ್ಯಯನಗಳ[1][2] ಪ್ರಕಾರ  2015ರಲ್ಲಿ ಭಾರತದಲ್ಲಿ ಸುಮಾರು 568 ಮಿಲಿಯನ್ ಜನರು ಬಯಲು ಬಹಿರ್ದೆಸೆಯ ಅಭ್ಯಾಸವನ್ನು ರೂಢಿಸಿಕೊಂಡಿದ್ದರು. ದಕ್ಷಿಣ ಏಷ್ಯಾದಲ್ಲಿ ಬಯಲು ಬಹಿರ್ದೆಸೆಯ ಅಭ್ಯಾಸವಿರುವ ಜನರಲ್ಲಿ ಸುಮಾರು 90% ಭಾರತೀಯರಾಗಿದ್ದುದು ದುರದೃಷ್ಟಕರ. ಬಯಲು ಮಲ ವಿಸರ್ಜನೆಯು ಮಕ್ಕಳ ಮೇಲೆ ನೇರವಾಗಿ ದುಷ್ಪರಿಣಾಮ ಬೀರಲು ಕಾರಣವಾಯಿತು. ಶುದ್ಧ ನೀರಿನ ಕೊರತೆ ಮತ್ತು ಕೈಗಳ ಸ್ವಚ್ಛತೆಯ ಕೊರತೆಯಿಂದಾಗಿ ಕಲುಷಿತ ನೀರಿನಿಂದ ಉಂಟಾಗುವ ಮತ್ತು ಅತಿಸಾರದಂತಹ ರೋಗಗಳು ವೇಗವಾಗಿ ಹರಡುತ್ತಿದ್ದವು, ಭಾರತದಲ್ಲಿ ಐದು ವರ್ಷಗಳ ಕೆಳಗಿನ ಸುಮಾರು 1,00,000 ಮಕ್ಕಳು ಮೃತರಾಗುತ್ತಿದ್ದರು.

ಭಾರತದಲ್ಲಿನ ನೀರು, ಸ್ವಚ್ಛತೆ ಮತ್ತು ನೈರ್ಮಲ್ಯದ ಕೊರತೆಯು ನವಜಾತ ಶಿಶುಗಳ ಮರಣಕ್ಕೆ ಒಂದು ಮುಖ್ಯ ಕಾರಣವಾಗಿತ್ತು. ವರದಿಯ ಅನುಸಾರ  1000 ನವಜಾತ ಶಿಶುಗಳಲ್ಲಿ 49 ಶಿಶುಗಳು ಮರಣ ಹೊಂದಿದ್ದವು.[3][4] 201 ಭಾರತದಲ್ಲಿನ ಶಾಲೆಗಳಲ್ಲಿ ಸುಮಾರು 22% ಶಾಲೆಗಳಲ್ಲಿ ಮಹಿಳೆಯರಿಗಾಗಿ ಶೌಚಾಲಯವಿರಲಿಲ್ಲ ಮತ್ತು ಸುಮಾರು 58% ಶಾಲೆಗಳಲ್ಲಿ ಶೌಚಾಲಯದ ಸೌಲಭ್ಯವಿರಲಿಲ್ಲ. ಶಾಲೆಗಳಲ್ಲಿನ ಸ್ವಚ್ಛತೆಯ ಕೊರತೆಯಿಂದಾಗಿ ಬಹಳಷ್ಟು ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದರು.[5]

2013-14ರ ವರದಿಗಳ ಅನುಸಾರ 50% ಜನಸಂಖ್ಯೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿರಲಿಲ್ಲ. ಸುಮಾರು 1.96 ಮಿಲಿಯನ್ ಕುಟುಂಬಗಳಲ್ಲಿ ದೊರೆಯುತ್ತಿದ್ದ ನೀರು ಆರ್ಸೆನಿಕ್ ಅಥವಾ ಫ್ಲೋರೈಡ್ ನಿಂದ ಕಲುಷಿತವಾಗಿತ್ತು. ಭಾರತದ ಸುಮಾರು 718 ಜಿಲ್ಲೆಗಳಲ್ಲಿನ 2/3 ಭಾಗದಷ್ಟು ಜಿಲ್ಲೆಗಳಲ್ಲಿ ಅಂತರ್ಜಲ ಬತ್ತಿಹೋಗಿದ್ದು ಬರಪೀಡಿತವಾಗಿದ್ದವು.[6] ಈ ಎಲ್ಲ ಮಜಲುಗಳು ಒಟ್ಟಾಗಿ ಭಾರತದ ಸಮಗ್ರ ಅಭಿವೃದ್ಧಿಯ ಮೇಲೆ ಪರಿಣಾಮ ಬೀರಿದ್ದವು.

ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ನಾಡಿನ ನಾಳಿನ ಪ್ರಜೆಗಳಿಗೆ ಸುಸ್ಥಿರ ಭವಿಷ್ಯದ ನಿರ್ಮಿಸುವ ಸಲುವಾಗಿ ತೆಗೆದುಕೊಂಡ ಕ್ರಮಗಳ ಕುರಿತ ಚಿಂತನೆ ಅತ್ಯಗತ್ಯ. ಗರ್ಭದೊಳಗಿನ ಕೂಸಿನ ಆರೋಗ್ಯದಿಂದ ಶಾಲಾ ವಿದ್ಯಾರ್ಥಿಗಳವರೆಗೂ ಸರ್ಕಾರ ಚಿಂತನೆ ನಡೆಸಿ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ಇದರಲ್ಲಿ ಒಂದು ಐತಿಹಾಸಿಕ ಕ್ರಮವೆಂದರೆ ಸ್ವಚ್ಛ ಭಾರತ ಮಿಷನ್ ಗ್ರಾಮೀಣ ಯೋಜನೆ. ಗ್ರಾಮೀಣ ಕರ್ನಾಟಕವನ್ನು ಸಂಪೂರ್ಣವಾಗಿ ಬಯಲು ಬಹಿರ್ದೆಸೆ ಮುಕ್ತವನ್ನಾಗಿಸುವ ನಿಟ್ಟಿನಲ್ಲಿ ಅನುಷ್ಠಾನಗೊಂಡ ಯೋಜನೆಯಡಿಯಲ್ಲಿ ನಾಡಿನಾದ್ಯಂತ ಸುಮಾರು 74 ಲಕ್ಷಕ್ಕೂ ಹೆಚ್ಚು ವೈಯಕ್ತಿಕ ಶೌಚಾಲಯಗಳು ಮತ್ತು 1000ಕ್ಕೂ ಹೆಚ್ಚು ಸಮುದಾಯ ಶೌಚಾಲಯಗಳ ನಿರ್ಮಾಣವಾದವು. ಶೌಚಾಲಯದ ನಿರ್ಮಾಣ ಮತ್ತು ಬಳಕೆಯಿಂದ ಗ್ರಾಮೀಣ ಕರ್ನಾಟಕ ಬಯಲು ಬಹಿರ್ದೆಸೆ ಮುಕ್ತವಾಗಿ[7] ಅತಿಸಾರಂದತಹ ರೋಗಗಳು, ನೈರ್ಮಲ್ಯ ಕೊರತೆಯಿಂದ ಉಂಟಾಗುವ ನವಜಾತ ಶಿಶುಗಳ ಮರಣದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯುಂಟಾಗಿದೆ.

 

ಇದರೊಂದಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮತ್ತು ಯುನಿಸೆಫ‍್ ಸಹಯೋಗದಲ್ಲಿ ಕೈಗಳ ಸ್ವಚ್ಛತೆಯ ಕುರಿತಾಗಿ ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ. ಶಾಲೆಗಳು ಮತ್ತು ಅಂಗನವಾಡಿಗಳಲ್ಲಿ ಕೈತೊಳೆಯುವುದರ ಮಹತ್ವವನ್ನು ತಿಳಿಸಿ ವಿವಿಧ ಮಾಹಿತಿ ಶಿಕ್ಷಣ ಚಟುವಟಿಕೆಗಳ ಮೂಲಕ ಮಕ್ಕಳನ್ನು ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳಲು ಪ್ರೇರೇಪಿಸಲಾಗುತ್ತಿದೆ.

 

ನಾಡಿನ ಎಲ್ಲ ಜಿಲ್ಲೆಗಳಲ್ಲೂ ನೀರಿನ ಗುಣಮಟ್ಟ ಕಣ್ಗಾವಲು ಮತ್ತು ಮೇಲ್ವಿಚಾರಣಾ ಕಾರ್ಯಕ್ರಮದಡಿಯಲ್ಲಿ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದ್ದು ನೀರಿನಲ್ಲಿ ಬೆರೆತಿರುವ ರಾಸಾಯನಿಕ ಮತ್ತು ಸೂಕ್ಷ್ಮ ಜೈವಿಕ ಅಂಶಗಳ ಕುರಿತಾಗಿ ಜಾಗೃತಿ ಮೂಡಿಸಲಾಗುತ್ತದೆ. ಗ್ರಾಮಗಳಲ್ಲಿ ಅಳವಡಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಅನುಕೂಲಕರವಾಗಿದ್ದು ಮಕ್ಕಳಿಗೆ ಬೆಳೆಯುವ ವಯಸ್ಸಿನಲ್ಲಿ ನೀರಿನಿಂದ ಉಂಟಾಗುವ ಅನಾರೋಗ್ಯಗಳು ಗಣನೀಯವಾಗಿ ಕಡಿಮೆಯಾಗಿವೆ.

ಹದಿಹರೆಯದ ಪುಟ್ಟ ಹೆಣ್ಣುಮಕ್ಕಳಿಗೆ ಋತುಚಕ್ರ ನೈರ್ಮಲ್ಯ ನಿರ್ವಹಣೆಯ ಕುರಿತಾಗಿ ಜಾಗೃತಿ ಮೂಡಿಸಲಾಗುತ್ತಿದ್ದು, ಶಾಲೆಗಳಲ್ಲಿ ಋತುಚಕ್ರ ತ್ಯಾಜ್ಯ ನಿರ್ವಹಣೆಯ ಕುರಿತಾಗಿಯೂ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಹರಡಿದ ತಪ್ಪು ಕಲ್ಪನೆಗಳು ಕಡಿಮೆಯಾಗಿ, ಬೆಳೆಯುವ ಹೆಣ್ಣುಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿದೆ. ಹೆಣ್ಣುಮಕ್ಕಳು ಸ್ವಚ‍್ಛ ಆರೋಗ್ಯಕರ ಋತುಚಕ್ರ ನೈರ್ಮಲ್ಯ ನಿರ್ವಹಣೆಯನ್ನು ರೂಢಿಸಿಕೊಳ್ಳುತ್ತಿದ್ದಾರೆ.

ಇಷ್ಟೇ ಅಲ್ಲದೆ, ಜಲ ಜೀವನ ಮಿಷನ್ ಮತ್ತು ಸ್ವಚ್ಛ ಭಾರತ ಮಿಷನ್ ಯೋಜನೆಯಡಿಯಲ್ಲಿ ರಾಜ್ಯದ ಎಲ್ಲ ಶಾಲೆ, ಅಂಗನವಾಡಿ ಮತ್ತು ಆಶ್ರಮಶಾಲೆಗಳಲ್ಲಿ ಅನುಕೂಲಕರ ಶೌಚಾಲಯ ಮತ್ತು ನೀರಿನ ವ್ಯವಸ್ಥೆ ಒದಗಿಸುವ ಸಲುವಾಗಿ ನೂರು  ದಿನಗಳ ಅಭಿಯಾನವನ್ನು ಹಮ್ಮಿಕೊಂಡಿದೆ. ಯಾವುದೇ ಶಾಲೆಯಲ್ಲಿ ನೀರು ಮತ್ತು ನೈರ್ಮಲ್ಯದ ಕೊರತೆ ಕಂಡುಬಂದಲ್ಲಿ ಶಿಕ್ಷಕರು, ಪೋಷಕರು, ಅಥವಾ ವಿದ್ಯಾರ್ಥಿಗಳು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಪರಿಹಾರ ಸಹಾಯವಾಣಿ ಸಂಖ್ಯೆ 9480985555 ಗೆ ಕರೆಮಾಡಿ ತಿಳಿಸಿ ಸೌಲಭ್ಯ ಪಡೆದುಕೊಳ್ಳಬಹುದು.

ಮಕ್ಕಳ ಸಮಗ್ರ ಅಭಿವೃದ್ಧಿಗೆ ನೆರವಾಗಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಪ್ರತಿ ಹಂತದ ಮಗುವಿಗೂ ಅದು ನೆರವಾಗುತ್ತದೆ. ನವಜಾತ ಶಿಶುವಿನಿಂದ ಹದಿಹರೆಯದ ಯುವತಿಯವರೆಗೂ ಇಲಾಖೆಯ ಕಾರ್ಯಕ್ರಮಗಳು ಮಕ್ಕಳಿಗೆ ಅನುಕೂಲಕರವಾಗಿದೆ.

Source:

[1] https://www.unicef.org/india/what-we-do/water-sanitation-hygiene

[2] https://www.unicef.org/wash/files/WASH_Annual_Report_Final_7_2_Low_Res.pdf

[3] https://data.unicef.org/country/ind/

[4] https://childmortality.org/data/India

[5] https://  www.unicef.org/india/ Rapid survey on children 2013-14

[6]https://www.unicef.org/india/what-we-do/clean-drinking-water#:~:text=Less%20than%2050%20per%20cent,present%20in%201.96%20million%20dwellings.

[7] http://sbm.gov.in/sbmdashboard/IHHL.aspx

Jal Jeevan Mission Karnataka

 6,591 total views,  2 views today

WhatsApp chat