Englishs
  • Become an activist

    If you gonna make it better

  • Next Meeting

    23/08/2017

  • Yout Support

    May Help Us

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಜಲ ಜೀವನ್ ಮಿಷನ್ ಯೋಜನೆಯು ಗ್ರಾಮೀಣ ಕರ್ನಾಟಕದ ನೀರಿನ ಬವಣೆಯನ್ನು ಹೋಗಲಾಡಿಸುವತ್ತ ಹೆಜ್ಜೆ ಇಟ್ಟಿದೆ. ರಾಜ್ಯದಲ್ಲಿ ಒಟ್ಟು 97,91,513 ಮನೆಗಳಿದ್ದು, ಜಲ ಜೀವನ್ ಮಿಷನ್ ಯೋಜನೆ ಜಾರಿಗೂ ಮುನ್ನ 24,51,220ಮನೆಗಳಷ್ಟೇ ಗೃಹ ನಳ ಸಂಪರ್ಕವನ್ನು ಹೊಂದಿರುವುದಾಗಿ ವರದಿಯಾಗಿತ್ತು. ಆದರೆ ಯೋಜನೆಯ ಜಾರಿಯಿಂದಾಗಿ ಇದೀಗ(25.5.2022)ಕ್ಕೆ ಶೇಕಡಾ 50% ಕ್ಕೂ ಹೆಚ್ಚು ಅಂದರೆ 49,53,997ಮನೆಗಳಿಗೆ ಕಾರ್ಯಾತ್ಮಕ ಗೃಹ ನಳ ಸಂಪರ್ಕವನ್ನು ಕಲ್ಪಿಸುವ ಮೂಲಕ ತಲಾ 55 ಲೀಟರ್ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. 2024ರೊಳಗಾಗಿ ಇಡೀ ಗ್ರಾಮೀಣ ಕರ್ನಾಟಕದ ಮನೆಗಳಿಗೆ ಕಾರ್ಯಾತ್ಮಕ ಗೃಹ ನಳ ಸಂಪರ್ಕ ಕಲ್ಪಿಸುವ ಮೂಲಕ ತಲಾ 55 ಲೀಟರ್ ಶುದ್ಧ ಕುಡಿಯುವ ನೀರನ್ನು ಒದಗಿಸುವ ಗುರಿ ಹೊಂದಲಾಗಿದ್ದು, ಈ ನಿಟ್ಟಿನಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪ್ರವೃತ್ತವಾಗಿದೆ.

ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ ಧಾರವಾಡ ಜಿಲ್ಲೆಯ, ಧಾರವಾಡ ತಾಲ್ಲೂಕಿನ ಮಮ್ಮಿಗಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಲಮಾಣಿ ತಾಂಡಾ. ಜಿಲ್ಲಾಕೇಂದ್ರದಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ಪುಟ್ಟದೊಂದು ಗ್ರಾಮ ಇದೀಗ 100% FHTC ಆಗಿರುವ ಗ್ರಾಮವಾಗಿ ಹೊರಹೊಮ್ಮಿದೆ.

ಗ್ರಾಮದ ಪಕ್ಷಿನೋಟ: ಪ್ರಸ್ತುತ ಗ್ರಾಮದಲ್ಲಿ ಸುಮಾರು 135 ಲಮಾಣಿ ಕುಟುಂಬಗಳಿದ್ದು, ಇದರಲ್ಲಿ 74 ಕುಟುಂಬಗಳು ಪರಿಶಿಷ್ಟ ಜಾತಿಗೆ ಸೇರಿದರೆ 15 ಕುಟುಂಬಗಳು ಬುಡಕಟ್ಟು ಜನಾಂಗದವರಾಗಿದ್ದು, ಇನ್ನುಳಿದ 41 ಕುಟುಂಬಗಳಲ್ಲಿ ಇತರೆ ಪಂಗಡದವರು ವಾಸವಾಗಿದ್ದಾರೆ. ಈ ಹಿಂದೆ ಜೋಪಡಿಗಳಲ್ಲಿ ವಾಸವಾಗಿದ್ದ ಇವರೆಲ್ಲರಿಗೂ ತಾಂಡಾ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಈ ಗ್ರಾಮದಲ್ಲಿ 1 ಅಂಗನವಾಡಿ ಕೇಂದ್ರ, 1 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, 3 ದೇವಸ್ಥಾನಗಳನ್ನು ಒಳಗೊಂಡಿದೆ. ಇಲ್ಲಿರುವ ಎಲ್ಲಾ ಕುಟುಂಬಗಳು ಇಂದಿಗೂ ಉಡುಗೆ, ತೊಡುಗೆ, ನೃತ್ಯ, ಹೀಗೆ ಎಲ್ಲದರಲ್ಲೂ ಲಂಬಾಣಿಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಗ್ರಾಮದ ಜನರು ಜಲ ಜೀವನ್ ಮಿಷನ್ ಯೋಜನೆಯ ಅನುಷ್ಠಾನಕ್ಕೂ ಮುನ್ನ ನೀರಿಗಾಗಿ ಕಿರು ಜಲ ಮೂಲಗಳಾದ ಹತ್ತಿರದ ಯಲ್ಲಮ್ಮನ ಕೆರೆ, ಗ್ರಾಮದ ಬಾವಿಯನ್ನೇ ಅವಲಂಬಿಸಿದ್ದರು. ಕ್ರಮೇಣ ಕಾಲ ಬದಲಾದಂತೆ ಗ್ರಾಮ ಪಂಚಾಯಿತಿಯು ಗ್ರಾಮಕ್ಕೊಂದು ನಳ ಸಂಪರ್ಕವನ್ನು ನೀಡಿದ ಬಳಿಕ ಎಲ್ಲಾ ಕುಟುಂಬಗಳು ಈ ಸಾರ್ವಜನಿಕ ನಳವನ್ನೇ ಅವಲಂಬಿಸಿದ್ದರು. 2019ರಲ್ಲಿ ಜಲ ಜೀವನ್ ಮಿಷನ್ ಯೋಜನೆ ಜಾರಿಯಾದಾಗ ಜಿಲ್ಲೆಯಲ್ಲಿ ಆದ್ಯತೆಯ ಮೇರೆಗೆ ಈ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಲಾಯಿತು. ಬಳಿಕ ಗ್ರಾಮ ಕ್ರಿಯಾ ಯೋಜನೆ, ಕ್ರಿಯಾ ಯೋಜನೆಯನ್ನು ರೂಪಿಸಿ ಈ ಗ್ರಾಮದಲ್ಲಿರುವ 135 ಕುಟುಂಬಗಳಿಗೂ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸುವ ಮೂಲಕ ಪ್ರತಿದಿನ ತಲಾ 55 ಲೀ. ಶುದ್ಧ, ಸುರಕ್ಷಿತ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಇದಿಷ್ಟೇ ಅಲ್ಲದೇ ಈ ಗ್ರಾಮದ ಎಲ್ಲಾ ಕುಟುಂಬಗಳು ಸೇರಿ ರೂ. 1,51,695/ಗಳನ್ನುಸಮುದಾಯ ವಂತಿಗೆಯ ರೂಪದಲ್ಲಿ ನೀಡುವ ಮೂಲಕ ಯೋಜನೆಯ ಅನುಷ್ಠಾನಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ.

ಇಲ್ಲಿನ ಮತ್ತೊಂದು ವಿಶೇಷ ಅಂದರೆ, ಈ ಗ್ರಾಮಕ್ಕೆ ನೀರು ಪೂರೈಕೆಯ ಹೊಣೆಯನ್ನು ಇದೇ ಗ್ರಾಮದ ನಿವಾಸಿಯಾದ ಶ್ರೀಮತಿ. ಶೈಲಾ ತವರೆಪ್ಪಾ ಲಮಾಣಿ ವಹಿಸಿಕೊಂಡಿದ್ದು ವಾಟರ್ ವುಮನ್ ಆಗಿ ಆಯ್ಕೆಯಾಗಿದ್ದಾರೆ. ಈಕೆ ಪದವೀಧರೆಯಾಗಿರುವುದು ಮತ್ತೊಂದು ವಿಶೇಷ. ಒಟ್ಟಿನಲ್ಲಿ ಮನೆ ಮನೆಗೆ ಗಂಗೆ ಯೋಜನೆಯಿಂದಾಗಿ ಲಮಾಣಿ ತಾಂಡಾದ ಚಿತ್ರಣವೇ ಬದಲಾಗಿದ್ದು, ಎಲ್ಲರು ನೆಮ್ಮದಿಯಾಗಿ ಬದುಕುತ್ತಿದ್ದಾರೆ.

 2,957 total views,  5 views today

WhatsApp chat